ಗುರುವಾರ, ಏಪ್ರಿಲ್ 23, 2009

ಬಸವೇಶ್ವರ ಚರಿತ್ರೆ - ರುದ್ರ ಕವಿ



ಈ ಬಾರಿ ದಿನಾಂಕ ೨೭ ಆಪ್ರಿಲ್ ೨೦೦೯ನ ರಂದು ಬಸವ ಜಯಂತಿ ಬರುತ್ತಿದೆ.

ಬಸವಣ್ಣನ ಬಗ್ಗೆ ಅದೆಷ್ಟು ಓದಿದರೂ ನನಗೆ ಬೇಜಾರು ಅನ್ನಿಸಲ್ಲ. ಮತ್ತೆ ಮತೆ ಓದಬೇಕು ಅನ್ನಿಸುತ್ತೆ. ಅಂತಹ ವ್ಯಕ್ತಿತ್ವ ಆತನದ್ದು. ಇದು ಒಬ್ಬ ಭಕ್ತನ / ಅನುಯಾಯಿಯ ಮಾತಲ್ಲ. ಒಬ್ಬ ಸಹೃದಯನ / ಇತರರೆಡೆಗೆ ಕಳಕಳಿಯಿರುವ ಜನ ಸಾಮನ್ಯನ ಮಾತು.

ಬಸವಣ್ಣನ ಭಕ್ತಿ, ಅಲ್ಲಮನ ಅನುಭಾವ , ಚನ್ನ ಬಸವಣ್ಣನ ಜ್ಞಾನಕ್ಕೆ ಸರಿಸಾಟಿಯಿಲ್ಲ ಅನ್ನುತ್ತಾರೆ. ಈ ಮಾತುಗಳನ್ನು ನಾನಂತೂ ಒಪ್ಪುತ್ತೇನೆ.

ಬಸವ ಜಯಂತಿಯ ಈ ಸಂದರ್ಭದಲ್ಲಿ ಬಸವಣ್ಣನ ಬಗ್ಗೆ ಏನಾದರೂ ಬರೀಬೇಕು ಅನ್ನುಸ್ತ ಇದೆ. ಆದ್ರೆ ಅನೇಕರು ಈಗಾಗಲೆ ಮಾತಾಡಿದ್ದಾರೆ, ಬರೆದಿದ್ದಾರೆ. ನನ್ನ ಬರಹದಲ್ಲಿ ಹೊಸತನ್ನೇನೂ ನಾನು ಕೊಡಲಾಗುವುದಿಲ್ಲ ಅನ್ನುಸ್ತಾ ಇದೆ. ಹಾಗಾಗಿ ರುದ್ರ ಕವಿಯ “ಬಸವೇಶ್ವರ ಚರಿತ್ರೆ” ಸ್ವಲ್ಪ ಭಾಗವನ್ನು ಇಲ್ಲಿ ಹಾಕುತ್ತಿದ್ದೇನೆ.

ಈ ಪುಸ್ತಕದಲ್ಲಿ ೩೦ ಸಂಧಿಗಳಿವೆ. ಬಸವಣ್ಣನ ಜನನ – ಬೆಳವಣಿಗೆ ಬಗ್ಗೆ ಹೇಳುವ ೧೦ ನೇ ಸಂಧಿಯನ್ನು ಇಲ್ಲಿ ಹಾಕುತ್ತ ಇದ್ದೇನೆ.

”””””””””””””””””””’

ಸೂಚನೆ ::
ಬಸವ ರಾಜನ ಜನನವಾಯಿತು
ಎಸೆವ ಬಾಲ್ಯದ ಲೀಲೆ ತೋರಿದ
ಕುಶಲ ಮತಿಯೆಂದೆನಿಸಿ ಬೆಳೆದನು ಬಾಗೆವಾಡಿಯಲಿ


ಬಾಯಿಯಿಂ ಬ್ರಹ್ಮವನೆ ಪೇಳದ
ಹೇಯ ಕೃತ್ಯವ ಗೇಯಲಾರದ
ಮಾಯೆ ಮೋಹವ ಮೆಟ್ಟಿ ನಿಂತಿಹ ಧೀರ ಗಂಭೀರ
ಕಾಯದಲಿ ಸಂಯಮವ ತಾಳಿದ
ಕಾಯಕದಿ ಕೈಲಾಸ ಕಂಡಿಹ
ರಾಯವರ ಶಿವಲಿಂಗಯೋಗಿಯೆ ನಮನ ಮಾಡುವೆನು……………………..೧


ದೃಶ್ಟಿ ಪುಷ್ಟಿಗೆ ನದಿ ನದಂಗಳು
ಸೃಷ್ಟಿ ಸೌಂದರ್ಯದಲಿ ಹಿಮಗಿರಿ
ಕಷ್ಟವಿಲ್ಲದೆ ಧಾನ್ಯ ಬೆಳೆಯುವ ಪುಣ್ಯನೆಲವಿಹುದು
ಎಷ್ತೋ ಎತ್ತರ ಗಿಡ ಮರಂಗಳು
ತುಷ್ಟಿ ಬೀರುವ ಸುತ್ತು ಜಡಧಿಯು
ನಿಷ್ಟೆಯಿಂ ಕಟ್ಟಿರುವ ಗುಡಿಗಳ ನಾಡು ಭಾರತವು. …………………….೨


ಧರಣಿ ಮಂಡಲ ಮಧ್ಯವಿರುವುದು
ಪರಮ ಪಾವನ ನಮ್ಮ ದೇಶವು
ಭರಿತ ಶರಣರ ದಾಸ ಸಂತರ ಸಂತಸದ ನಾಡು
ಹರಿಯು ಹತ್ತವತಾರ ತಾಳಿದ
ಹರನ ಗಣಗಳು ಬಂದು ಹೋದರು
ನಿರುತ ಧರ್ಮದ ಹಿರಿಯ ಜಾಗೃತಿ ನಡೆದು ಬಿಟ್ಟಿಹುದು.............೩


ಶ್ರೇಷ್ಟ ಸೌಂದರ್ಯಾತಿಶಯದಿಂ
ತುಷ್ಟಿ ನಮ್ಮಯ ಮನಕೆ ದೊರೆವುದು
ಎಷ್ಟು ಪೊಗಳಿದರೇನು ತೃಪ್ತಿಯು ಸಿಕ್ಕದೀ ಮನಕೆ
ದೃಷ್ಟಿ ಪರಿಯುವ ವರೆಗು ನೋಡಲು
ಎಶ್ಟೋ ಬಗೆಯಲಿ ಸೊಬಗು ತೋರ್ವುದು
ಸೃಶ್ಟಿಕರ್ತನ ಜಾಣ್ಮೆಯಲ್ಲದೆ ನಮ್ಮದೇನಿಲ್ಲಿ.................೪


ಬೆಟ್ಟ ಪರ್ವತ ಗುಡ್ಡವದರೊಳು
ಹುಟ್ಟಿ ಹರಿಯುವ ನದಿ ನದಂಗಳು
ದಟ್ಟ ಕಾಡಿನ ಮಧ್ಯ ಚರಿಸುವ ಪಕ್ಷಿ ಮೃಗ ಜಂತು
ಅಟ್ಟಿ ಬರುತಿಹ ವನ್ಯ ಮೃಗಗಳು
ಬಿಟ್ಟೂ ಬಿಡದಲೆ ಸುರಿವದಬದಬೆ
ನೆಟ್ಟ ನೋಟದಿ ನೋಡೆ ಮನ ಸಂತಸದಿ ಕುಣಿವುದು................೫


ಇಂತ ಭಾರತದೇಶ ಮಧ್ಯದಿ
ಶಾಂತಿಯುತ ಕನ್ನಡದ ನಾಡಿದೆ
ಚಿಂತೆಯಿಲ್ಲದೆ ಸಂತಸವ ನಾಂತಿಹಳು ಪುಣ್ಯಮಯಿ
ಕಾಂತಿ ಬೀರುತ ಒಂದು ಕಡೆಯಲಿ
ನಿಂತು ಕೊಂಡಿದೆ ಬಾಗೆಬಾಡಿಯು
ಎಂತು ಪೇಳುವುದದರಹಿರಿಮೆಯ ಆಗದೆನ್ನಿಂದ ....................೬


ಅಂದು ಬಾಗೇವಾಡಿ ಪುರವಿದು
ಬಂಧುರತೆಯಿಂದಗ್ರಹಾರವು
ಹೊಂದಿಕೊಂಡೇ ಶೈವ ಬ್ರಾಹ್ಮಣರಿದ್ದರವರೆಲ್ಲಾ
ಒಂದೆ ಸವನೆ ಯಜ್ಞ ಯಾಗವ
ಅಂದವಾಗಿಯೇ ನಡಿಸುತ್ತಿದ್ದರು
ಕುಂದು ತಾರದೆ ಮಾದರಸನೇ ಒಡೆಯನಾಗಿದ್ದ................೭

ಹತ್ತು ಹನ್ನೊಂದನೆಯ ಶತಕದಿ
ಇತ್ತ ಕನ್ನಡ ನಾಡಿನೆಲ್ಲಡೆ
ಸುತ್ತಿ ಜೈನರ ರಾಜ್ಯದಾಳಿಕೆ ಬೆಳೆಯ ತೊಡಗಲ್ಕೆ
ಒತ್ತಿ ಬಂದ ವಿಧರ್ಮಿ ರಾಜರ
ಮುತ್ತಿ ಅವರನು ಏಳದಂದದಿ
ಗತ್ತಿನಿಂದಲಿ ದೂಡಿ ನಿಂತರು ಇಂಥ ಪರಿಸರದಿ.............೮


ಇಂತ ಸಮಯದಿ ವೀರಶೈವರು
ಚಿಂತೆಯಿಲ್ಲದೆ ಶೈವರೊಂದಿಗೆ
ನಿಂತಿತಲ್ಲರವತ್ತು ಮೂರು ಪುರಾತನರ ಹೆಸರು
ಕಾಂತಿಯುತವಾಗೆಲ್ಲ ಕಡೆಯಲಿ
ಭ್ರಾಂತಿ ಕಳೆದರು ಒಂದೆ ಮನದಲಿ
ಶಾಂತಿ ಕದಡದೆ ಬೆಳಕು ತೋರಿದರೆಲ್ಲ ಕಡೆಯಲ್ಲಿ................೯


ಈ ಪುರಾತನರೆಲ್ಲ ತಮಿಳರು
ಕೋಪ ತಾಪಗಳನ್ನು ಅರಿಯರು
ಈ ಪರಿಯೊಳಿರುತಿರಲು ಕನ್ನಡ ನಾಡಿನಲ್ಲೊಬ್ಬ
ಜಾಪು ಗಾಲನು ಇಡುತ ಬಂದನು
ಭೂಪ ರೇವಣಶಿದ್ದನಾತನು
ದೀಪದಂದದಿ ಬೆಳಗ ತೊಡಗಿದ ಸರ್ವ ಕಡೆಯಲ್ಲಿ.............೧೦


ಕೊಲ್ಲಿ ಪಾಕಿಯೊಳೀತ ಜನಿಸಿದ
ಮೆಲ್ಲನಲ್ಲಿಂದವನು ಚರಿಸಿದ
ನೆಲ್ಲ ಕಡೆಯಲಿ ತಿರುಗಿ ಕೊನೆಕೊನೆಗಿಂಗಳೇಶ್ವರದಿ
ಕಲ್ಲಿನಲಿ ಗವಿ ಕಂಡು ಸೇರಿದ
ನಲ್ಲಿ ತಾಪವನು ಗೈದು ಕೆಲದಿನ
ಬಲ್ಲ ಜನಗಳು ಬರಲು ಭೋಧೆಯ ಮಾಡಿದನು ಅಲ್ಲಿ.............೧೧


ವೀರಶೈವೋದ್ಧಾರ ಕಾರ್ಯವ
ಧೀರತನದಿಂ ಮಾಳ್ಪುದಲ್ಲದೆ
ಸೇರಿ ಸರ್ವರ ಮಧ್ಯ ಧರ್ಮದ ಭೋಧೆ ಮಾಡಿದನು
ಆರು ಅರಿಯದ ಸಾರ ಸತ್ವವ
ಬೀರುತ್ತಿದ್ದನು ಸರ್ವ ಜನರೊಳು
ಕಾರುಣಿಕ ನೆಂದೆಲ್ಲ ಕರೆದರು ದೇವನಿವನೆಂದು ...................೧೨


ಶೈವ ಮತದಾ ದ್ವಿಜಳು ಆದರು ಆದರು
ಭಾವದಲಿ ಮುತ್ತಬ್ಬೆ ತಾರದೆ
ದೈವ ಭಾವವ ಪೊತ್ತು ರೇವಣ ಶಿದ್ದರಲಿ ಬಂದು
ಸೇವೆ ಗೈವಳು ಮುಗಿಸಿ ಕೊನೆಯಲಿ
ಪಾವನಾತ್ಮಕ ನಂದಿಕೇಶ್ವರ
ದೇವ ಮಂದಿರ ಸೇರಿ ಪೂಜೆಯ ಮಾಳ್ಪಳನುದಿನವು.................೧೩


ಇಂತು ಶಿವ ಸಂಸ್ಕಾರ ಪೊಂದುತ
ಸಂತಸದಿ ಕಾಲವನ್ನು ಕಳೆದಳು
ಬಂತು ಮಗ ಕಳಚೂರ್ಯ ಬಿಜ್ಜಳ ಮಾಂತ್ರಿಯೆಂದಾಗ
ಚಿಂತೆಯಾಯಿತು ಮಾದಲಾಂಬಿಕೆ
ಗೆಂತು ವರವನು ಹುಡುಕಲೆನ್ನುವ
ಭ್ರಾಂತಿ ಮುತ್ತಿತು ಮಗಳ ಮಾಂಗಲ್ಯವನು ಕಾಣಲ್ಕೆ ............೧೪


ಮಾದರಸನಿಹ ಬಾಗೇವಾಡಿಯ
ಬೀದಿ ಬದಿಗಿಹ ಮಹಡಿ ಮನೆಯಲಿ
ವೇದ ವೇದಾಂತವನು ಬಲ್ಲವ ನೋಡಿರವನನ್ನು
ಮಾದಲಾಂಬಿಕೆಗೀತ ಯೋಗ್ಯನು
ಕಾದು ಕೂಡ್ರದೆ ಹೋಗಿ ನೋಡಿರಿ
ಸಾಧು ಮಾತಿಗೆ ಮೆಚ್ಚಿ ಬಂದಳು ವರನ ನೋಡಲ್ಕೆ ................೧೫


ಅರಿತುಕೊಂಡರು ಒಬ್ಬರೊಬ್ಬರು
ಹರುಷದಿಂದಲಿ ಒಪ್ಪಿಕೊಂಡರು
ಭರದಿ ಮಂಗಲ ಕಾರ್ಯ ಮುಗಿಸಿದರೀರ್ವರೊಂದಾಗಿ
ಪರಮ ಕುವರರು ಆಕೆಗಿಬ್ಬರು
ಹಿರಿಯ ಪುತ್ರನು ಮಂತ್ರಿಯಾದನು
ಕಿರಿಯ ಪುತ್ರಿಯು ಇಲ್ಲಿ ಸೇರ್ದಳು ಚಿಂತೆ ನೀಗಿದಳು ................೧೬


ಸಕ್ಕೆಯ ಸವಿಮಾತಿನಿಂದಲಿ
ಚಿಕ್ಕ ದಂಪತಿ ಬಾಳು ಸಾಗಿಸೆ
ಉಕ್ಕಿ ಬಂದಿತು ಮಮತೆಯೆಂಬಾ ಕಡಲು ಸರ್ವರಿಗೆ
ತಕ್ಕ ಸಮಯಕೆ ಶಿವನು ಕರುಣಿಸೆ
ಅಕ್ಕ ನಾಗಮ್ಮನನು ಪಡೆದರು
ಅಕ್ಕರತೆಯಿಂ ಜೋಕೆ ಮಾಡಿದರವರು ಒಂದಾಗಿ...........೧೭


ಹೊಂದಿಕೆಯಲತಿ ಮಮತೆಯಿಂದಲಿ
ಒಂದು ಗೂಡಿಯೆ ಬಾಳು ಸಾಗಿಸೆ
ಮುಂದೆ ಒಂದಿನ ಮಾದಲಾಂಬಿಕೆ ಮತ್ತೆ ಹಡೆಯಲ್ಕೆ
ಕಂದನೀಸಲ ಪುಟ್ಟಿ ಬಂದನು
ಮಂದಿ ಮಕ್ಕಳು ದೇವ ರಾಜನು
ಎಂದು ಪೆಸರನು ಇರಿಸಿ ಕರೆದರು ಸಾನುರಾಗದಲಿ.....................೧೮


ಅಂಗಳಕೆ ಮನೆ ರೈತ ಬಂದನು
ಜಂಗು ಕಟ್ಟಿದ ಎತ್ತು ಹೂಡಲು
ಮಂಗಳಾಂಗಿಯು ಹತ್ತಿ ಕುಳಿತಳು ಹೊಲವ ನೋಡಲ್ಕೆ
ಕಂಗಳಿಗೆ ಹಬ್ಬವನ್ನು ನೀಡುವ
ತುಂಗಾ ಬಾಗಿದ ಹೊಡೆಯ ಹಿಡಿಯಲು
ಹೊಂಗನಸಿನಲಿ ವೃಷಭ ಮಿಂಚನು ತೋರಿ ಮರೆಯಾದ ...................೧೯


ನಿಂತ ನಿಲುವಿನಲೆ ಮಾದಲಾಂಬಿಕೆ
ಸಂತಸದ ಸುದ್ದಿಯನು ತನ್ನಯ
ಕಾಂತನಿಗೆ ಪೇಳಿದಳು ಕೇಳುತ ನಕ್ಕು ಮಾದರಸ
ಶಾಂತಿಯಿಂದಲಿ ಇಂತು ಪೇಳಿದ
ಭ್ರಾಂತಿಯಲ್ಲದೆ ಬೇರೆಯೇನಿದೆ
ಚಿಂತೆ ಮಾಡಲು ಬೇಡವೆಂದನು ಆದರೂ ಕೊರಗು...........೨೦



ತನ್ನ ಅನುಭವ ಭರಿಸದಾದಳು
ಅನ್ನ ನೀರಿನ ಪರಿವೆ ತೊರೆದಳು
ಸನ್ನು ತಾಂಗನ ಪಡೆವೆ ಉದರದಿ ಎಂದು ಹಂಬಲದಿ
ಇನ್ನು ನಾನಿದ ಮರೆಯಲಾರೆನು
ಭಿನ್ನವಿಲ್ಲದೆ ಕಂಡುಕೊಳ್ಳುವೆ
ಚನ್ನ ಚಲುವಿನ ದೇವ ವೃಷಭನೆ ಮರೆಯ ಬೇಡೆನ್ನ ..................೨೧


ಎದ್ದು ಬೇಗನೆ ಮಿಂದು ಬಂದಳು
ಶುದ್ದ ಮನಿದಿಂ ಗುಡಿಯ ಸೇರ್ದಳು
ಗದ್ದಲಿಲ್ಲದೆ ಸಂಗಮೇಶ್ವರ ಲಿಂಗದಡಿಯಲ್ಲಿ
ಬಿದ್ದು ಬೇಡುವಳೊಮ್ಮೆ ಭಕ್ತಿಯ
ಹೊದ್ದು ಕೊಂಡೇ ಪುಜೆಗೈವಳು
ಸದ್ದು ಮಾಡದೆ ಬಂದು ವೃಷಭನ ಬೇಡಿಕೊಳ್ಳುವಳು ............೨೨


ದೇವ ದೇವನೆ ವೃಷಭ ದೇವನೆ
ಪಾವನಾತ್ಮಕ ಸಂಗಮೇಶನೆ
ಭಾವನೆಯೆ ನೀ ಬರಿದುಗೊಳಿಸದಿರಯ್ಯ ಬೇಡುವೆನು
ಕಾವದೇವನು ನೀನು ಎನ್ನುವ
ಭಾವನೆಯೆ ನಾನೆಂದು ಮರೆಯನು
ದೈವ ಕೃಪೆಯಿದು ವೆಂಬ ನಿಷ್ಠೆಯು ನನ್ನದಾಗಿಹುದು ................೨೩


ಮನಸಿನೊಳಗಿದ್ದದ್ದು ಒಂದಿನ
ಕನಸಿನಿಂದಲಿ ಹೊರಗೆ ಬರುವುದು
ಜನುಮ ಜನುಮದ ಬಂಧ ತಾನೆ ತೋರ್ಪುದೊಮ್ಮೊಮ್ಮೆ
ಅನುದಿನವು ಹಂಬಲವು ಹೆಚ್ಚಲು
ಸನುಮತಿಸಿದಂತಾಯ್ತು ದಿನದಿನ
ಚಿನುಮಯನೆ ಇದನೆಲ್ಲ ಪರಿಹರಿಪಾತ ನವನೆಂಬೆ ...............೨೪



.....ಮುಂದುವರೆಯುತ್ತೆ

ಶುಕ್ರವಾರ, ಏಪ್ರಿಲ್ 03, 2009

ಬಚ್ಚ ಬರಿಯ ಬೆಳಗು


ಇಂದು ನಾವು ಮುಕ್ತಿ ,ಮೋಕ್ಷ , ಐಕ್ಯ ಇವುಗಳ ಬಗ್ಗೆ ಭ್ರಮೆಯುಳ್ಳೈವರಾಗಿದ್ದೇವೆ. ಮೋಕ್ಷಕ್ಕೆ 'ತನ್ನ' ದಾರಿಯೊಂದೆ ಸರಿ, ಉಳಿದದ್ದೆಲ್ಲ ತಪ್ಪು ದಾರಿಗಳು ಅನ್ನೋ ವಾದವನ್ನು ಕೇಳಿದ್ದೇನೆ. ತನ್ನ ದೇವರೇ ಸರ್ವೋತ್ತಮ, ಹಾಗಾಗಿ ತಾನು ಶ್ರೇಷ್ಠ ,ಉಳಿದವರು ಕೀಳು ಅನ್ನೋ ಕೀಳು ಮತಾಂಧರನ್ನು ಅನೇಕರನ್ನು ನೋಡಿದ್ದೇನೆ.

ಆ ದೇವರ ಒಲುಮೆಗಾಗಿ ಮತ್ತು ಇನ್ನು ಕೆಲವರು ಮುಕ್ತಿಗಾಗಿ ಏನೆಲ್ಲಾ ಸರ್ಕಸ್ ಮಾಡ್ತಾರೆ ಅನ್ನುವುದು ನಮಗೆ ಗೊತ್ತು. ಈ ಸರ್ಕಸ್ಗಳು ಆವಶ್ಯಕವೇ ಅಂತ ಒಮ್ಮೆ ಯೋಚಿಸುವುದು ಒಳ್ಳೆಯದು.

ಅಲ್ಲಮ ಪ್ರಭುಗಳ ವಚನ ನನಗೆ ತುಂಬ ಇಷ್ಟವಾಗುತ್ತೆ. ವಚನವನ್ನು ಇಲ್ಲಿ ಓದಿಕೊಂಡು , ಕೇಳಿ.

ಸುತ್ತಿ ಸುತ್ತಿ ಬಂದಡಿಲ್ಲ, ಲಕ್ಷ್ಯ ಗಂಗೆಯ ಮಿಂದಡಿಲ್ಲ,
ತೊಟ್ಟ ತುದಿಯ ಮೇರು ಗಿರಿಯ ಮೆಟ್ಟಿ ಕೂಗಿದಡಿಲ್ಲಾ ಇಲ್ಲಾ
ನಿತ್ಯ ನೇಮದಿಂದ ತನುವ ಮುಟ್ಟಿ ಕೊಂಡಡಿಲ್ಲಾ
ನಿಚ್ಚಕ್ಕಿನ ಗಮನವಂಗಲ್ಲಿಗೆ
ಅತ್ತಲಿತ್ತ ಹರಿವ ಮನವ ಚಿತ್ತದಲೀ ನಿಲಿಸ ಬಲ್ಲಡೆ
ಬಚ್ಚ ಬರಿಯ ಬೆಳಗು ಗುಹೇಶ್ವರನೆಂಬ ಲಿಂಗವು


Get this widget | Track details | eSnips Social DNA


*ನಿಚ್ಚಕ್ಕಿನ ಗಮನವಂಗಲ್ಲಿಗೆ ... ಈ ಪದದ ಅರ್ಥ ಆಗಲಿಲ್ಲ. ತಿಳಿದವರು ಬರೆಯಿರಿ.

ಬಯಲಿನ ಬಗ್ಗೆ , ಸಮಾಧಿಯ ಬಗ್ಗೆ , ಇನ್ನೂ ಸರಳ ವಾಗಿ ಹೇಳಲು ಆಗದೇನೋ!